* ಆಶಯ * : ಮಂಜು.ಆರ್
ಕಾಲಗರ್ಭದ ಸುಳಿಯಲ್ಲಿ ಸಿಲುಕದೆ
ಭೂತ,ಭವಿಷ್ಯ, ವರ್ತಮಾನವನು
ಮೆಟ್ಟಿ ನಿಂತು ಅಲ್ಲಿ ಅಂಕುರಿಸಿ
ಅಟ್ಟಹಾಸವನು ಮೆರೆಯುವ ಕವಿತೆಯಲ್ಲ....ನನ್ನದು...
ಅನಾದಿ ಕಾಲದಿಂದಲೂ ನೋವ ತಿಂದು
ಕತ್ತಲೆಯಲ್ಲಿನ ಕತ್ತಲೆಯಲ್ಲಿ
ಬದುಕು ಸಾಗಿಸುತ್ತಿರುವವರ,ಅವರ
ಬಾಳಿಗೆ ಹಣತೆಯಾಗುವ ಕವಿತೆ....ನನ್ನದು...
ಪ್ರೀತಿ,ಪ್ರೇಮ,ಕಾಮಗಳ ನಡುವೆ
ನಲುಗಿಸಿ,ಧರ್ಮ,ವೈರಾಗ್ಯಗಳಲ್ಲಿ
ಬಳಲಿಸಿ,ಗುಪ್ತವಾದ ಸುಪ್ತ
ಮನಸ್ಸಿನೊಂದಿಗೆ ಆಡುವ ಕವಿತೆಯಲ್ಲ....ನನ್ನದು...
ಕಗ್ಗತ್ತಲೆಯಿಂದ ಬೆಳಕಿನೆಡೆಗೆ
ಕೈಹಿಡಿದು ನಡೆಸುವ,ಬರುವ
ಕಷ್ಟಗಳ ಮಥಿಸುವ ಕಲೆ
ಹೇಳುವ ಜಾತ್ಯಾತೀತವಾದ ಕವಿತೆ....ನನ್ನದು...

No comments:
Post a Comment